Tuesday, May 18, 2010

ವಾಹನಾಸುರನ ಯಗ್ನಪಶು ಬೆಂಗಳೂರು ೨: ಚಾಲಕರನ್ನು ನಿಯಂತ್ರಿಸಿ.


ಬೆಂಗಳೂರಿನ ೪೫೦೦ ಕಿ.ಮಿ. ರಸ್ತೆಗಳ ಉದ್ದಗಲಗಳನ್ನು ದೊಡ್ಡದು ಮಾಡುವುದು ಸುಲಭವೇನಲ್ಲ, ಸಾಧ್ಯವೂ ಇಲ್ಲ.
ಅಜೀವ ವಸ್ತುವಾದ ವಾಹನ ಅಸುರನಂತೆ ವರ್ತಿಸುವುದು ಅದರ ಮೇಲೆ ಚಾಲಕ ಕುಳಿತಾಗಲೇ.
ಒಂದು ವಿಧದಲ್ಲಿ ಚಾಲಕನಿಗೇ ಬ್ರಹ್ಮನ ಪಟ್ಟವೂ ದೊರಕಿದ ಹಾಗೆ ಅಲ್ಲವೇ?
ಹರಿತವಾದ ಚಾಕು, ರೌಡಿಯ ಹಸ್ತದಲ್ಲಿ ಪ್ರಾಣಹಾನಿ ಮಾಡಬಲ್ಲುದು.
ಅದೇ ಚಾಕು ಶಸ್ತ್ರ ತಜ್ಞನ ಕೈಯಲ್ಲಿ ಜೀವ ಉಳಿಸುತ್ತದೆ.
ಹಾಗೆಯೇ ಬಂದೂಕು ಮತ್ತು ವಾಹನ ಚಾಲಕನ ಲೈಸೆನ್ಸ್ ಕೂಡ. ಪ್ರಾಣಾಂತಿಕ.
ವಾಹನ ಚಾಲನೆ ಜನ್ಮ ಸಿದ್ಧ ಹಕ್ಕಲ್ಲ. ಸಮಾಜ ತನ್ನ ಹಿತಕ್ಕಾಗಬಹುದಾದ ಧಕ್ಕೆಯನ್ನು ಅರಿತೂ , ನೀಡಿರುವ ವರ, ಭಾಗ್ಯ ಎಂದು ಭಾವಿಸಿ ಮಿತವಾಗಿ ಉಪಯೋಗಿಸಿ ಕೊಳ್ಳ ಬೇಕು.
ವರ ನೀಡಿದ ಹಸ್ತ ಹಿಂಪಡಿಯಲೂ ಬಹುದು.
ಆ ಅಧಿಕಾರ ಸಮಾಜಕ್ಕೆ ಇದೆ.
ಇಲ್ಲಿಯ ತನಕ ಆ ಅಧಿಕಾರವನ್ನು ಚಲಾಯಿಸಿಲ್ಲ ಎನ್ನುವುದು ಹೇಡಿತನದ, ಕೈಲಾಗದ ಲಕ್ಷಣ ಎಂದು ನಾವು ಸೊಕ್ಕಬಾರದು.
ಅದನ್ನು ದುರುಪಯೋಗ ಪಡಿಸ ಬಾರದು. ಈ ಪ್ರಜ್ಞೆ ಒಂದು ವಿಧದಲ್ಲಿ ತಂದೆ ತಾಯಿಗಳು ಮಕ್ಕಳಲ್ಲಿ ಮೊದಲಿನಿಂದಲೂ ಬೆಳೆಸಬೇಕು.
ಆದರೆ ಈ ನಮ್ಮ ನಾನು, ನನ್ನದು ಮತ್ತು ನನಗೆ ಎನ್ನುವ ಸ್ವಾರ್ಥಿತ್ವ ಪ್ರಾಧಾನ್ಯ ಸಮಾಜದಲ್ಲಿ ಅನೇಕರು ಯಾವತ್ತಿಗೂ ಕಲಿಯುವುದೇ ಇಲ್ಲ.
ಕೊನೆಯವರೆಗೆ ಕಲಿಯದಿದ್ದಲ್ಲಿ ಆವರ ವೈಯಕ್ತಿಕ ಜೀವನ ಸುಗಮವಾಗಿ ನಡೆಯದೆ ಇರಬಹುದು.
ಆದರೆ ಇದೇ ಮನೋಭಾವವನ್ನು ರಸ್ತೆ ಎಂಬ ರಂಗ ಭೂಮಿಯಲ್ಲಿ ತಳೆದಲ್ಲಿ ಅದು ರಣಭೂಮಿಯಾಗಿ ಪರಿವರ್ತಿಸುವುದು.
ಈ ಹುಟ್ಟು ಗುಣಗಳು ಚಾಲನೆಯ ವಿಧದಲ್ಲಿ ಮತ್ತು ಚಾಲಕನ ನಡವಳಿಕೆಯಲ್ಲಿ ಹೊರಗಿನವರಿಗೆ ಕಾಣಿಸಿಕೊಳ್ಳುತ್ತದೆ.
ದುರದೃಷ್ಟವಶಾತ್ ಇದೇ ಸಮಾಜದ ಪ್ರತಿಬಿಂಬವಾಗಿ ಬಿಡುತ್ತದೆ.
ರಸ್ತೆಯಲ್ಲಿ ಸಾವಿರಾರು ವಾಹನಗಳು ಸರಿಯಾಗಿ ಸುರಕ್ಷವಾಗಿ ಎಲ್ಲಾ ಕಾಯ್ದೆಗಳ ಅನುಸಾರ ಓಡಾಡುತ್ತಿದ್ದರೂ, ಒಂದೇ ಒಂದು
ಸರಿಯಾಗಿಲ್ಲದ್ದಿದ್ದಲ್ಲಿ, ಎಲ್ಲರ ಹೆಸರೂ ಹಾಳಾಗುತ್ತದೆ. ೧೦೦೦ ಸಿ ಸಿ ಹಾಲು ಒಂದು ಹನಿ ನಿಂಬೆ ರಸದಿಂದ ಓಡೆದಂತೆ.
ಈ ಅಂಶವನ್ನು ಅವರ್ಯಾರೋ ಒಬ್ಬರು ಸರಿಯಾಗಿ ಓಡಿಸದಿದ್ದರೆ ನಮಗೇನಾಯ್ತು ಎಂಬ ಧೋರಣೆ ತಳಿದಿರುವರು ಮರೆಯ ಕೂಡದು .
ಅವರ್ಯಾರದೋ ತಪ್ಪು ಕೆಲಸ ನಮ್ಮ ಹೆಸರನ್ನೂ ಕೆಡಿಸುತ್ತದೆ!
ಆ ಒಂದೇ ಕಾರಣಕ್ಕೊಸ್ಕರವಾಗಿಯಾದರೂ , ನಾವೆಲ್ಲರೂ ನಮ್ಮೆಲ್ಲರನ್ನೂ ಬೆಂಗಳೂರಿನ ರಸ್ತೆಗಳಲ್ಲಿ ಏನಾಗುತ್ತಿದೆ, ನಾವೇ ನು ಮಾಡ ಬಹುದು ಎಂದು ಸಂಪೂರ್ಣ ತೊಡಗಿಸಿಕೊಳ್ಳಲು ಸಾಕು.
ಕಾನೂನು ಬಾಹಿರ ಚಾಲನಾ ವಿಧಾನ, ಭಂಗಿ ಎರಡೂ ರಸ್ತೆ ಸಂಚಾರಿಗಳಲ್ಲಿ ಕ್ರೋಧ ಕೋಪ ಉಂಟು ಮಾಡುತ್ತದೆ.
ಹಾಗೂ ಕಾನೂನಿನ ಹತೋಟಿ ಏನಾದರೂ ಇದೆಯೇ ಎಂಬ ಪ್ರಶ್ನೆ ಹುಟ್ಟಿಸುತ್ತದೆ.
ಅದೇ ಕ್ಷಣದಲ್ಲಿ ಇಲ್ಲ ಅನ್ನುವ ಉತ್ತರವೂ ಹುಟ್ಟಿಕೊಂಡು ಬಿಡುತ್ತದೆ.
ಈ ಬಗೆಯ ನಡವಳಿಕೆಯನ್ನು ತಡೆದು ಕೊಳ್ಳುತ್ತಿರುವ ಕಾನೂನು ಹಾಗು ಸಮಾಜದ ಬಗ್ಗೆ ತಾತ್ಸಾರ
ಉದ್ಭವವಾಗುತ್ತದೆ.
ಇದು ಕಾಲಾಂತರ ಒಟ್ಟುಗೂಡಿ, ಸಂಯಮತೆಯ ಎಣೆ ತಲುಪುತ್ತದೆ.
ಪ್ರಕೋಪಕ್ಕೆ ಬದಲಾಯಿಸಿ ಹೋಗಿ ರಸ್ತೆ ರೋಷವಾಗಿ ಹೊರಬಿದ್ದು ಪ್ರಾಣ ಆಸ್ತಿ ಹಾನಿ ಗಳು ಉಂಟಾಗಿರುವುದು ಕಂಡಿದ್ದೇವೆ. ನವದೆಹಲಿಯಲ್ಲಿ ವ್ಯಾಪಾರಿಯ , ಮುಂಬೈನಲ್ಲಿ ಒಬ್ಬ ನಿವೃತ್ತ ಸೈನ್ಯಾಧಿಕಾರಿಯ ಮೇಲೆ ಹಲ್ಲೆಮಾಡಿ ಹತ್ಯೆಯೂ ಆಗಿದೆ.
ಇವೆಲ್ಲವೂ ಸಮಾಜ ತತ್ಕ್ಷಣ ತಡೆಗಟ್ಟ ಬೇಕಾದ ಅಪರಾಧ.
ಚಾಲನೆಯ ಶೈಲಿ:
ವಿಪರೀತ ವೇಗದ ಓಟ. ಪಾದಚಾರಿಗಳ ಹಕ್ಕುಗಳ ಉಲ್ಲಂಘನೆ. ಕೆಂಪು ದೀಪ ಜಿಗಿಯುವಿಕೆ. ಲೈಸೆನ್ಸ್ ಪಡೆಯಲಾಗದಂತಹ ಅಪ್ರಾಪ್ತ ವಯಸ್ಕರಿಂದ ಚಾಲನೆ. ಏಕ ಮುಖ ರಸ್ತೆಯ ಉಲ್ಲಂಘನೆ.
ಮೊನ್ನೆ ನಾನೇ ಕಂಡ ಒಬ್ಬ ಮೋಟರ್ ಸೈಕಲ್ ಚಾಲಕನ ಪರಮೋಚ್ಚ ಉಲ್ಲಂಘನೆ ಎಂದರೆ ಬಾಯಿಯಲ್ಲಿ ಸಿಗರೆಟ್, ಹೆಲ್ಮೆಟ್ ರಹಿತ, ಸೆಲ್ ಫೋನ್ ಕೈ ಭರಿತ, ಓದಲಾಗದ ಮುಂದಿನ ನಂಬರ್ ಪ್ಲೇಟ್, ರಸ್ತೆಯ ಎಡ ಭಾಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ, ಹಿಂದಿನ ನಂಬರ್ ಪ್ಲೇಟ್ ಹೆಲ್ಮೆಟ್ ನಿಂದ ಮುಚ್ಚಿ ಓದಲಾಗಂದತಹ ಸ್ಥಿತಿ, ಮಕ್ಕಳು ಓಡಾಡುವ ಸ್ಕೂಲ್ ಬಳಿ. ಯಾರಾದರು ಸತ್ತಿದ್ದರೆ ಸಮಾಜವೇ ಹೊಣೆ ಅಲ್ಲವೇ?
ಮೋಟಾರ್ ಸೈಕಲ್ ಹಾಗು ಇತರ ದ್ವಿ ಚಕ್ರ ವಾಹನಗಳಲ್ಲಿ ಒಂದೇ ಚಕ್ರದ ಮೇಲೆ ವಾಹನ ಚಾಲನೆ- ವೀಲಿ.
ಎಡಬದಿ ಚಾಲಕನ ಅಂಧ ಪ್ರದೇಶ (ಬ್ಲೈಂಡ್ ಸ್ಪಾಟ್ ).ಬಲ ತಿರುಗುತ್ತಿರುವರ ಮುಂದೆ ಎಡ ತಿರುಗುವುದು, ಎಡ ತಿರುಗುತ್ತಿರುವವರ ಎಡದಿಂದ ನೇರ ಹಾದು ಹೋಗುವುದು, ಬಲಕ್ಕೆ ತಿರುಗುವುದು . ಅಥವಾ ಮುಂದಾಟುವಿಕೆ (ಒವರ್ ಟೇಕಿಂಗ್), ಹಾವಿನಂತೆ(ವೀವಿಂಗ್) ಲೇನ್ ಬದಲಾವಣೆ.
ಅಖಂಡ ಹಳದಿ (ಸಾಲಿಡ್)ಅಥವಾ ಬಿಳಿ ಪಟ್ಟಿ ದಾಟಿ ಮೀರಿ ಮುಂದಾಟುವಿಕೆ, ಮುನ್ಸೂಚನೆ-ಅವಶ್ಯಕವಾದ ದೀಪಗಳಿಲ್ಲದೆ ಚಾಲನೆ. ಸಿಗ್ನಲ್ ಕೊಡದೆ ಎಡ ಬಲ ಅಥವಾ U ತಿರುಗುವಿಕೆ, ಪಾನ ಮತ್ತ ಚಾಲನೆ.
ಇವೆಲ್ಲವೂ ಚಲಿಸುವ(traffic/moving) ನಿಯಮಗಳ ಉಲ್ಲಂಘನೆ. ಅತೀವ ಪ್ರಾಣ ಹಾನಿ,ಘಾಸಿಕಾರಕ. ನಿಲ್ಲಿಸಿರುವ (ಪಾರ್ಕಿಂಗ್) ಉಲ್ಲಂಘನೆಗಳಿಗಿಂತ ತೀವ್ರತಮ ಅಪಾಯಕಾರಕ ಉಲ್ಲಂಘನೆಗಳೆಂದು ಪರಿಗಣಿಸಲಾಗುತ್ತವೆ. ಈ ಬಾಲಿಶ ಶೈಲಿಯನ್ನು ರಕ್ತ ಗತ ಮಾಡಿ ಕೊಂಡಿರುವ ಚಾಲಕರಿಂದ ಪ್ರೌಢ ಮಟ್ಟದ ಚಾಲನೆಯನ್ನು ಹೇಗೆ ತಾನೇ ಅಪೇಕ್ಷಿಸಬಹುದು?
೨)ಚಾಲಕನ ಭಂಗಿ :
ಸಾಮಾನ್ಯವಾಗಿ ಸೃಜನಶೀಲತೆ, ವಿನಯಶೀಲತೆ, ಸಂಭಾವಿತತೆ ಎಲ್ಲಾ ಪಕ್ವವಾದ ಮೇಲೆ ಕಂಡು ಬರುವ ಗುಣಗಳು.ವೃತ್ತಿಯಿಂದ ಬರತಕ್ಕದ್ದು.ಆದರೆ ದುರದೃಷ್ಟವಶಾತ್ ಮುಕ್ಕಾಲು ಜನ ಚಾಲಕರಿಗೆ ಇರುವುದಿಲ್ಲ. ಕಲಿಯುವ ಪ್ರಯತ್ನವಂತೂ ಮಾಡುವುದೇ ಇಲ್ಲ.ವಿಶೇಷ ವಾಗಿ ಬಸ್, ಆಟೋ ಇತ್ಯಾದಿ. ಅವರ ಜೀವನಾಧಾರವಾದ ಕಸುಬಾದರೂ ಅದಕ್ಕೆ ತಕ್ಕ ಸೂಕ್ತ ವರ್ತನೆ ಕಲಿತಿರುವುದಿಲ್ಲ.
ಇತ್ತೀಚೆಗೆ ಕುಡಿದು ರಸ್ತೆ ಮಧ್ಯದಲ್ಲಿ ನಿಲ್ಲಿಸಿ, ಹಾರನ್ ಬಾಹಿರ ಪ್ರದೇಶದಲ್ಲಿ ಅನಾವಶ್ಯಕ ಹಾರನ್ ಬಾರಿಸುತ್ತಿದ ಚಾಲಕನಿಗೆ ನೊಂದ ಆ ರಸ್ತೆಯ ನಿವಾಸಿಗಳು ಯಾಕಪ್ಪ ಹೀಗೆ ಹಾರನ್ ಹೊಡಿಯುತ್ತೀಯ ಎಂದಾಗ ಅವನು "ನೀನ್ಯಾವನೋ ಕೇಳೋದ್ದಿಕ್ಕೆ, ನಿಮ್ಮಪ್ಪಂದ ರಸ್ತೆ "ಎಂದು ಬಾಯಿಗೆ ಬಂದ ಹಾಗೆ ಕೂಗಾಡಿ ಮತ್ತೆ ಗಾಡಿ ಚಲಾಯಿಸಿ ಕೊಂಡು ಹೋದ. ನಮ್ಮಲ್ಲೇ ತತ್ಕ್ಷಣ ಬರುವ ಪೋಲಿಸಿನವರಿದ್ದರೆ ಹಿಡಿದು ಜುಲ್ಮಾನೆ ಹಾಕಿ ಮತ್ತು ಇಳಿಯುವ ತನಕ ಜೇಲಿನಲ್ಲಿ ಕೂಡಿಸಬಹುದಿತ್ತು. ಆದರೆ ಮನೆ ಎಲ್ಲಿ ಅಂತ ತಿಳಿದಿದ್ದ ಇಂಥ ಪುಂಡರ ಭಂಡತನದಿಂದ ನಿವಾಸಿಗಳನ್ನು ರಕ್ಷಿಸುವ ಸಾಮರ್ಥ್ಯ ಪೋಲಿಸಿನವರಿಗಿದೆಯೇ?
ನಮ್ಮ ಅಧಿಕಾರಿಗಳು ಫಿರ್ಯಾದಿಗಳ ಹೆಸರನ್ನು ಗುಪ್ತವಾಗಿದುವುದರಲ್ಲಿ ಪೂರ ವಿಫಲರಾಗಿದ್ದರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ.
ಕೆಲವು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ವಾಜಪೇಯೀ ಅವರಿಗೆ ಪಿ ಡಬ್ಲ್ಯೂ ಡೀಯ, ಅಕ್ರಮ ವಿಚಾರಗಳ ಬಗ್ಗೆ ಫಿರ್ಯಾದಿ ಕಳುಹಿಸಿದ್ದವನನ್ನು ಅಕ್ರಮಿಗಳು ಕೊಂದೇ ಹಾಕಿಬಿಟ್ಟರು. ಇನ್ನೂ ವಿಷಾದಕರ ವಿಷಯ ಏನೆಂದರೆ ಈ ಪ್ರಾಣ ಭಯವೇ ಇದ್ದ ಆತ, ತನ್ನ ಹೆಸರನ್ನು ಗೋಪ್ಯವಾಗಿದ ಬೇಕೆಂದು ಪ್ರಾರ್ಥಿಸಿ ಕೊಂಡಿದ್ದ .
ಇತ್ತೀಚೆಗೆ ಆ ಹಂತಕರಿಗೆ ಜೇಲ್ ಶಿಕ್ಷೆ ಆಯಿತು. ಆದರೆ ಅವಿವೇಕತನದಿಂದ? ಅಥವಾ ಬೇಕಂತಲೇ ಅವನ ಹೆಸರನ್ನು ಬಹಿರಂಗ ಪಡಿಸಿದ ಸರ್ಕಾರಿ ಅಧಿಕಾರಿಗಳಿಗೆ ಏನೂ ಶಿಕ್ಷೆ ಆಗಲಿಲ್ಲವಲ್ಲ? ಏನು ಪ್ರಯೋಜನ?
ಆದರೆ ಹೋದ ಪ್ರಾಣ ಮತ್ತೆ ಬರುತ್ತದೆಯೇ?
ದೀಪಗಳಿಲ್ಲದೆ, ಬ್ರೇಕ್ ಇಲ್ಲದೆ, ಸೈಲೆನ್ಸೆರ್ ಇಲ್ಲದೆ, ಓವರ್ ಲೋಡ್, ಕಪ್ಪು ಗಾಜು, ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಇರುವ ರಸ್ತೆಗೆ ಅನರ್ಹವಾದ IMV ಕಾಯ್ದೆ ಬಾಹಿರ ವಾಹನಗಳೆಂದು ಗೊತ್ತಿದ್ದೂ ವಾಹನಗಳನ್ನು ನಡೆಸುವುದು.
ಸುರಕ್ಷಾ ಚಾಲನೆಗೆ ಅಗತ್ಯವಾದ ಕೈಯಿ ಕಾಲು, ಕಣ್ಣು, ಕಿವಿ ಸರಿಯಾಗಿಲ್ಲದಿರುವಾಗ ಇತರರಿಗೆ ಗಂಡಾಂತರ ಎಂದು ಅರಿವಿದ್ದರೂ ವಾಹನ ಚಲಿಸುವುದು .
ನಿದ್ದೆ ಸಾಲದಿರುವಾಗ , ಸುಸ್ತು, ಮದ್ಯ, ಮದ್ದು, ಮಾತ್ರೆ , ಕೋಪ ತಾಪ, ದುಃಖದ, ಉದ್ವೇಗ, ಆವೇಶ, ಉದ್ರೇಕಗಳ, ಮತ್ತಿನಲ್ಲಿ ವಾಹನ ಚಾಲನಾ ಸಾಮರ್ಥ್ಯ ಕುಂದಿದೆ ಎಂದು ಚೆನ್ನಾಗಿ ಗೊತ್ತಿದ್ದರೂ ಓಡಿಸುವುದು.
ವೈಪರೀತ್ಯ ವಾತಾವರಣಗಳಲ್ಲಿ - ದಟ್ಟ ಮಳೆ, ಹೊಗೆ, ಮಂಜು, ಬರ್ಫ ಇತ್ಯಾದಿ ವಾಹನ ಉಪಯೋಗಿಸುವುದು.
ಇವೆಲ್ಲವೂ ಭಂಡ ಧೈರ್ಯದ ಪರಮಾವಧಿ. ಬೆಂಕಿಯೊಡನೆ ಸರಸವಾಡಿದಂತೆ. ಇವೆಲ್ಲವನ್ನು ಖಂಡಿತ ಸಮಾಜ ಸಹಿಸಬೇಕಾಗಿಲ್ಲ, ಸಹಿಸಕೂಡದು ಸಹ .

ಪಾಶ್ಚಾತ್ಯ ದೇಶಗಳಲ್ಲಿ ಈ ಬಗೆಯ ಗಂಭೀರವಾದ ರಸ್ತೆ ಉಲ್ಲಂಘನೆಗಳಿಗೆ ಭಾರಿ ಮೊತ್ತದ ಜುಲ್ಮಾನೆ ಮತ್ತು ಧೀರ್ಗ ಸಜೆ ವಿಧಿಸುತ್ತಾರೆ. ಮತ್ತೆ ಮತ್ತೆ ಮಾಡಿದರೆ ಲೈಸೆನ್ಸ್ ವಜಾ ಮಾಡುತ್ತಾರೆ.
ಆದರೆ ನಮ್ಮಲ್ಲಿ ಏಕೋ ಒಂದು ಬಗೆಯ ನೊಂದವರಿಗೆ ಮೀಸಲಾಗಿರಿಸ ಬೇಕಾದ ಅಯ್ಯೋ ಪಾಪ ಮನೋಭಾವ ಉಲ್ಲಂಘನಾಕಾರರತ್ತ ಅಧಿಕಾರಿಗಳು ತೋರಿಸೋದಲ್ಲದೆ , ಹೊದ್ರೆಹೊಗಲಿ ಅಂತ ನೊಂದವರ ಬಾಯಿ ಮುಚ್ಚಿಸುತ್ತಾರೆ. ಇದರಿಂದ ಉಲ್ಲಂಘನಾಕಾರರಿಗೆ ದುರಹಂಕಾರ, ಸೊಕ್ಕು, ಮತ್ತು ನೊಂದ ಸಾರ್ವಜನಿಕರಿಗೆ ಹತಾಶತೆ, ಕಾನೂನಿನತ್ತ ಅಗೌರವ ಬರುವುದರಲ್ಲಿ ಸಹಜವಲ್ಲವೇ ? ಮಾಡಬೇಕಾದ್ದೇನು?ಮಹಾತ್ಮ ಗಾಂಧೀ ಅವರ ಎಂದೆಂದಿಗೂ ಮರೆಯಲಾಗದ ಬುದ್ಧಿವಾದ.ಕೆಟ್ಟದ್ದನ್ನು ನೋಡ ಬೇಡ, ಕೆಟ್ಟದ್ದನ್ನು ಆಡ ಬೇಡ ,ಕೆಟ್ಟದ್ದನ್ನು ಕೇಳ ಬೇಡ.


ಅದನ್ನು ಅಕ್ಷರಶಃ ಕ್ಕಿಂತ ಒಂದು ಕೈ ಮೇಲೇ ಪಾಲಿಸಿಕೊಂಡು, ನಾವೆಲ್ಲರೂ- ಸಾರ್ವಜನಿಕರೂ, ಅಧಿಕಾರಿಗಳೂ ಕೂಡ ,ನೋಡ ಬೇಕಾದದ್ದನ್ನೂ ನೋಡದೆ, ಕೇಳಬೇಕಾದದ್ದನ್ನೂ -ಯಾಕೆ, ಏನು ಎತ್ತ ಅಂತ ? - ಕೇಳದೆ, ಹೇಳ ಬೇಕಾದದ್ದನ್ನೂ -ಹೀಗೆ, ಹಾಗೆ ಅಂತ - ಹೇಳದೇ, ಮಾಡ ಬೇಕಾದದ್ದನ್ನೂ -ಮಾಡದೆ .



ಕೈಕಟ್ಟಿ ಗಾಂಧೀಜಿಯವರ ಕಲ್ಪನೆಯನ್ನೂ ಮೀರಿ ನಾಲಕ್ಕನೇ ಮಂಗವಾಗಿ ಕುಳಿತಿದ್ದೇವೆ . ಆದ್ದರಿಂದಲೇ ಈ ಹೀನಾಯ ಸ್ಥಿತಿಯನ್ನು ಅನುಭವಿಸುತ್ತಿದೇವೆ.
ಸಾರ್ವಜನಿಕರು, ಈ ತಾಂತ್ರಿಕ ಪ್ರಾಧಾನ್ಯ ಸೆಲ್ ಫೋನ್,ಇಂಟರ್ ನೆಟ್ ಕಾಲದಲ್ಲಿ, ಉಲ್ಲಂಘನಕಾರರ ವಿವರಗಳನ್ನು ಅಧಿಕಾರಿಗಳಿಗೆ ಸಾಧ್ಯವಾದ ಚಿತ್ರ ಇತ್ಯಾದಿ ಪುರಾವೆಗಳೊಂದಿಗೆ ಒದಗಿಸಬೇಕು.
ಅದನ್ನು , ಅಧಿಕಾರಿಗಳು, ಸಾರ್ವಜನಿಕರು ನಿಮ್ಮ ಕೆಲಸ ಸುಗಮಗೊಳಿಸುವ ಮಿತ್ರರು, ಹಿತೈಷಿಗಳು, ಪಕ್ಕೆಯಲ್ಲಿಯ ಮುಳ್ಳುಗಳಲ್ಲ ಎಂದು ಅರ್ಥಮಾಡಿ ಕೊಂಡು,ಅವರ ಕಾನೂನು ನಿಮಿತ್ತ ಕಾರ್ಯಗಳನ್ನು ಪರಿಪೂರ್ಣವಾಗಿ ನಿರ್ವಹಿಸಿ ಬೆಂಗಳೂರನ್ನು ವಿಶ್ವ ದರ್ಜೆಯ ನಗರವಾಗಿ ತತ್ಕ್ಷಣ ಮಾರ್ಪಡಿಸ ಬಹುದು ಮಾರ್ಪಡಿಸಬೇಕು..
ಎಲ್ಲರ ಹಿತ ರಕ್ಷಣೆಯೊಡನೆ ನಿಮ್ಮ ಮತ್ತು ಪರಿವಾರದವರ ಆರೋಗ್ಯ ಶಾಂತಿಯೂ ಉಳಿಯುತ್ತದೆ.
ಈ ಸಂಧರ್ಭದಲ್ಲಿ ಖ್ಯಾತ ಪಾಶ್ಚಾತ್ಯ ತತ್ವ ಚಿಂತಕ ರೈನ್ ಹೋಲ್ಡ್ ನೀಬರ್ ಹೇಳಿದ ಉಕ್ತಿ - ಪ್ರಾರ್ಥನೆ ಅತ್ಯುಚಿತ. ಎಲ್ಲರಿಗೂ ಅನ್ವಯಕಾರಕ.

'ದೇವರೇ, ನನ್ನ ಕೈಲಾಗದ ಸನ್ನಿವೇಶಗಳನ್ನು ಅಂಗೀಕರಿಸುವ ತಾಳ್ಮೆ ಯನ್ನು ಕೊಡು,
ಕೈಲಾಗುವ ಸನ್ನಿವೇಶಗಳನ್ನು ಬದಲಾಯಿಸುವ ಧೈರ್ಯ ಸ್ಥೈರ್ಯ ಕೊಡು,
ಆಗುವ ಆಗದ ಸನ್ನಿವೇಶಗಳನ್ನು ತಿಳಿದುಕೊಳ್ಳುವ ಪ್ರಜ್ಞೆ ಯನ್ನು ಕೊಡು.'

God Grant me the serenity to
accept things I cannot change,
Courage to change things that I canand the wisdom to know the difference.-- Reinhold Niebur:




















M.B.ನಟರಾಜ್ ( ಕಾ: ೨೦೧೦)

No comments:

Post a Comment