Friday, May 14, 2010

ವಾಹನಾಸುರನ ಬಲಿ ಪಶು ಬೆಂಗಳೂರು ೧: ತಡೆಯುವುದೆಂತು ?



ವಾಹನಾಸುರನ ಬಲಿ ಪಶು ಬೆಂಗಳೂರು ೧: ತಡೆಯುವುದೆಂತು ?
ವಾಹನಗಳಿಗೆ ಜೀವ ಇಲ್ಲ. ದಾನವತ್ವ ದೈವತ್ವ ಚೇತನ ತುಂಬುವ ಶಕ್ತಿ ಅದನ್ನು ಉಪಯೋಗಿಸುತ್ತಿರುವ ಮಾನವನಿಗೆ ಇದೆ.. ಅವರು ಸಭ್ಯತೆಯಿಂದ ಮನುಷ್ಯರಂತೆ ವರ್ತಿಸಿದರೆ ಅವುಗಳ ಮೂಲಕ ಸಮಾಜದ ಸಭ್ಯತೆ ಗೌರವ ಪ್ರಕಟಗೊಳ್ಳುತ್ತದೆ ಪ್ರಕಾಶಿಸುತ್ತದೆ.
ಈ ಮಾತು ಭಾರತದಿಂದ ಹೊರ ಹೋಗಿ ಬಂದವರ ಎಲ್ಲರ ಅನುಭವ ಸತ್ಯ.
ರೀತಿ, ನೀತಿ ಇಲ್ಲದೆ ರೌದ್ರತೆ ರೋಷ ಭರಿತ ಅಮಾನುಶತ್ವ ವನ್ನು ಈ ೪೫೦೦ ಕಿ .ಮಿ. ರಸ್ತೆಗಳೆಂಬ ಮೈದಾನಗಳಲ್ಲಿ ತೋರಿದರೆ ಅವು ರಣ ರಂಗವೆಂಬ ಕಸಾಯಿ ಖಾನೆಯಲ್ಲದೆ ಇನ್ನೇನಾಗಬಲ್ಲುದು ? ಪ್ರತಿದಿನ ಕೊನೆಪಕ್ಷ ೩ ಅನಾವಶ್ಯಕ ಸಾವುಗಳು, ೧೦ ಗಾಯಾಳುಗಳು. ಇದರಿಂದ ಸಮಾಜಕ್ಕೆ, ರಾಜ್ಯಕ್ಕೆ ಆಗುವ ನಷ್ಟ - ಕೋಟ್ಯಾಂತರ ರೂಪಾಯಿಗಳು. ಇನ್ಶುರೆನ್ಸ್ , ಆಸ್ಪತ್ರೆ, ಕಳೆದುಕೊಂಡ ಗಳಿಕೆ/ಸಂಬಳ ಅದರಿಂದಾಗುವ ಸಾಮಾಜಿಕ ಹಾನಿ ಅಪಾರ.
ನಂದಾ ಎಂದರೆ ಅನೇಕರಿಗೆ ಮೊದಲು ಜ್ಞಾಪಕಕ್ಕೆ ಬರುವುದು BMW ಹಾಗು ಅದರಿಂದ ಸತ್ತ ಜೀವಗಳು.ಆ ಅಪಘಾತದ ಕೇಸಿನಿಂದ ತಪ್ಪಿಸಿಕೊಳ್ಳಲು ಅವನ್ನು ಮತ್ತು ಅವನ ಪರಿವಾರದವರು ಮಾಡಿದ ಧನದ ಮತ್ತು ರಾಜಕೀಯ ಪ್ರಭಾವಗಳ ಹರ ಪ್ರಯತ್ನ. ನಮ್ಮ ದೇಶದ ಅತಿ ಸಂಭಾವಂತ ಪ್ರಧಾನ ಮಂತ್ರಿ ಜಿ ಎಲ್ ನಂದಾ ಅಲ್ಲ.
ಸಾಲ್ಮಾನ್ ಖಾನ್ ಅಂದಕೂಡಲೇ ಅವನು ಮದ್ಯದ ಅಮಲಿನಲ್ಲಿ ಮಾಡಿದ ಮಾರಣಹೋಮದ ಆಹುತಿಗಳು.

ಅವನ ಪ್ರಸಿದ್ಧ ಹಂ ಆಪ್ಕೆ ಹೈ ಕೌನ್ , ಮೈನೆ ಪ್ಯಾರ್ ಕಿಯ ಚಲನ ಚಿತ್ರಗಳಲ್ಲ.
ಅದಕ್ಕೇ ದೊಡ್ದವರನ್ನುವುದು.
ಜೀವನ, ಸಮಾಜ ಮಕ್ಕಳಂತೆ, ಕನ್ನಡಿಯಂತೆ, ಮುಗುಳ್ನಕ್ಕರೆ ಮುಗುಳ್ನಗುತ್ತವೆ .
ರೋಷ ಕೆಂಡ ಕಾರಿದರೆ ಜ್ವಾಲಾಮುಖಿಗಲಾಗುತ್ತವೆ.

ವಾಹನಗಳು, ಸೆಲ್ ಫೋನ್ ಗಳು ನಮ್ಮ ಜೀವನವನ್ನು ಉತ್ತಮ ಗೊಳಿಸುವ ಸಲಕರಣೆಗಳು ಮಾತ್ರ.
ಮನಸ್ಸಿನಂತೆಯೇ. ಇಂಗ್ಲಿಷಿನಲ್ಲಿರುವ ಹೇಳಿಕೆಯಂತೆ Mind is a good servant but a bad master. ಮನಸ್ಸು ಒಳ್ಳೆಯ ಆಳು, ಆದರೆ ಕೆಟ್ಟ ಧಣಿ.

ಸಲಕರಣೆಗಳು ಕೂಡ ಹಾಗೆಯೇ.
ಅವುಗಳ ವಶಕ್ಕೆ ನಮ್ಮ ಜೀವನದ ಎಷ್ಟು ಭಾಗವನ್ನು ಮುಡುಪಾಗಿದುತ್ತೇವೆ ಅಥವಾ ಮುಡುಪಾಗಿಡಲು
ಸಿದ್ಧರಿದ್ದೇವೆ ಎಂಬುವ ನಿರ್ಧಾರ ಖಂಡಿತ ನಮ್ಮದು ಮತ್ತು ಕೇವಲ ನಮ್ಮದು. ಉಪಯೋಗ ಎಲ್ಲಿಗೆ ಮುಗಿಯುತ್ತದೆ ದುರುಪಯೋಗ ಎಲ್ಲಿ ಶುರುವಾಗುತ್ತದೆ ಎನ್ನುವುದು ನಮಗೆ ಗೊತ್ತಾಗುವ ಸಾಮರ್ಥ್ಯ ಕಳೆದುಕೊಂಡಿದ್ದೇವೆ ಎನ್ನುವುದು ನಮಗೇ ಗೊತ್ತಾಗುವುದಿಲ್ಲ. ಬೇರೆ ಯಾರಾದರು, ನಿಮ್ಮ ಹಿತೈಷಿಗಳು, ಮಿತ್ರರು ಅಥವಾ ಬೇರೆ ಯಾರಾದರು ಹೇಳಬೇಕು. ನಿನಗೆ ಈ ನಡುವೆ ಸರಿಯಾಗಿ ಕೇಳಿಸುವುದಿಲ್ಲ ಅಲ್ಲವೇ? ಅಥವಾ ಈ ನಡುವೆ ನಿನ್ನ ಕಣ್ಣು ಚೆನ್ನಾಗಿ ಕಾಣಿಸುತ್ತದೆಯೇ? ಅನ್ನುವ ಹಾಗೆ. ನನಗೆ ದೃಷ್ಟಿ ಮಾಂದ್ಯ ಇದೆ ಎನ್ನುವ ಅಂಶ ನನಗೆ ಗೊತ್ತಾಗಿದ್ದು ನನ್ನ ೮ನೆ ತರಗತಿಯ ಜೀವ ಶಾಸ್ತ್ರ ಅಧ್ಯಾಪಕಿ " ಕಣ್ಣು ಕಿವಿಚಿ ನೋಡುತ್ತೀಯ ನಿನಗೆ ಮಾಂದ್ಯ ವಿರಬೇಕು ಕಣ್ಣಿನ ತಜ್ಞರಿಗೆ ತೋರಿಸಿಕೋ" ಎಂದಾಗಲೇ. ಕಳೆದ ೪೭ ವರ್ಷಗಳಿಂದಲೂ ಕನ್ನಡಕ ಉಪಯೋಗಿಸುತ್ತಿದೇನೆ. ಸಲಕರಣೆಗಳಿಂದ ಆಗುವ ಹಾನಿಗಳು ಮರೆತುಹೋಗುವುದು ಅದರ ಉಪಯೋಗದ ಮತ್ತಿನಲ್ಲಿ ಮರೆತೇ ಹೋಗುವುದು ಬಹಳ ಸುಲಭ. ಪ್ರತಿನಿತ್ಯ ಬೆಂಗಳೂರಿನ ಉದ್ದಗಲ ಸೀಮಿತ ರಸ್ತೆಗಳಿಗೆ ೮೦೦ ವಾಹನಗಳು ರಾಕ್ಷಸ ಸಂತಾನದಂತೆ ಇಳಿಯುತ್ತಿವೆ. ಅಂದರೆ ಪ್ರತಿ ಕಿ ಮಿ ಉದ್ದದಲ್ಲಿ ಸುಮಾರು ೭೦ ವಾಹನಗಳು ನಿಂತಿರುತ್ತವೆ ಅಥವಾ ಓಡುತ್ತಿರುತ್ತವೆ. ಅವ್ಳುಗಳು ನಿಂತಿದ್ದರೂ ತೊಂದರೆ. ಏಕೆಂದರೆ ಮನುಷ್ಯನಿಗೆ ಕೇವಲ ೬ ಅಡಿ ಉದ್ದ ೩ ಅಡಿ ಅಗಲ ಜಾಗ ಮಲಗಲು ಸಾಕು ಆದರೆ ದ್ವಿಚಕ್ರಕ್ಕೆ ೮ ಮತ್ತು ೪ ಆದರೂ ಅಂದರೆ ಎರಡರಷ್ಟು ಬೇಕು! ಚಲಿಸುತ್ತಿರುವಾಗ ಅದರಿಂದಾಗುವ ಮೊದಲ ಮುಖ್ಯ ಹಾನಿ ಇತರರ ಆರೋಗ್ಯಕ್ಕೆ. ಪ್ರತಿನಿತ್ಯ ಬೆಂಗಳೂರಿನ ವಾಯು ಪರಿಸರದೊಳಕ್ಕೆ ವಾಹನಗಳು ೧೫೦೦ ಟನ್ಸ ವಿಶಾನಿಲಗಳನ್ನು ತುಂಬುತ್ತಿವೆ.
ಇದರಿಂದ , ಬೆಂಗಳೂರಿಗರು ಪ್ರತಿ ವರ್ಷ ೮೦೦ ಕೋಟ ರೂಪಾಯಿಗಳಷ್ಟು ಮಾಲಿನ್ಯ ಸಂಭಂದಿ ಆಸ್ತಮಾ, ಶ್ವಾಸ ಕೋಶ ಕ್ಯಾನ್ ಸೆರ್ , ಕೆಮ್ಮು, ನೆಗಡಿ ,ಕಣ್ಣಿನ ಉರಿ, ಉಸಿರಾಟದ ತೊಂದರೆಗಳು ಇತ್ಯಾದಿ ರೋಗಗಳಿಗಾಗಿ ಖರ್ಚು ಮಾಡುತ್ತಾ ಇದ್ದಾರೆ.
ಅಷ್ಟೇ ಅಲ್ಲದೆ , ಶಬ್ದ ಮಾಲಿನ್ಯದಿಂದ ಆಗುವ ತೊಂದರೆಗಳು ಅನೇಕ.
ರಸ್ತೆ ಎಂಬ ರಣರಂಗದ ಹೋಲಿಕೆಯ ಸೂಕ್ತತೆ ಇನ್ನೂ ಇಲ್ಲಿಗೇ ಮುಗಿಯದು..
ಅದು ನಿರ್ಜೀವ ವಸ್ತುವಾದರೂ ಅಲ್ಲಿ ನಡೆಯುವ ಯುದ್ಧದ ಪರಿಣಾಮ ನೀವು ಮನೆಯಿಂದ ಹೊರಡುವ ಮುಂಚೆಯೇ ನಿಮ್ಮನ್ನು ಚಡಪಡಿಸಿ ಮನೋ ಶಾಂತಿಯನ್ನು ಸಂಯಮತೆಯನ್ನು ಕಳೆದುಕೊಳ್ಳುವಂತೆ ಮಾಡುವ ಶಕ್ತಿ ಅದಕ್ಕಿದೆ. ಅದು ಅಲ್ಲಿ ನಿಮಗಿಂತ ಮುಂಚೆ ಇಳಿದ ಯೋಧರ ಸಾಮರ್ಥ್ಯದ ಮೇಲೆ ಅವಲಂಬಿಸಿದೆ.
ಒಂದು ವಿಧದಲ್ಲಿ ನಿಮ್ಮ ಪೂರ್ತಿ ದಿವಸದ ಸಂತೋಷ, ತಾಳ್ಮೆ, ಶಾಂತಿಯ ಪರೀಕ್ಷೆ ಮನೆಯ ಹೊರಗೆ ಒಂದು ಹೆಜ್ಜೆ ಇದುವ ಮೊದಲೇ ಮುಗಿದಿರುತ್ತದೆ.
ಈ ನಿತ್ಯಾನುಭವದ ಫಲಿತಾಂಶ ಕಾಲಾಂತರ ಬಡ್ಡಿಯ ಸಮೇತ ದೇಹ , ಮನೋ ಆರೋಗ್ಯ ಮುಖಾಂತರ ಒಮ್ಮೆಲೇ ಬೆಳಕಿಗೆ ಬರುತ್ತದೆ.
ಸೈಲೆಂಸೆರ್ ಇಲ್ಲದ , ಮ್ಯುಸಿಕಾಲ್/ಏರ ಹಾರನ್ ಕೊಂಬು ಕಹಳೆ ಗಳಿಂದ , ಅಥವಾ ಅತಿ ಶಭ್ಧ ಮಾಡುವಂತೆ ಅಳವಡಿಸಿ ಬದಲಾಯಿಸಿ ಚಲಿಸುವ ಗಾಡಿಗಳಿಂದ ಮತ್ತೆಂದಿಗೂ ಸರಿಪಡಿಸಲಾಗದ ಶಾಶ್ವತ ಕಿವುಡು , ತಲೆನೋವು, ಕೋಪ ತಾಪಗಳಿಂದ ಆಗುವ ಕೆಲಸ, ಕಾರ್ಯ ಮತ್ತು ಧನ ಹಾನಿಗಳಿಂದ ಬವಳುತ್ತಿದ್ದೇವೆ.
ಪ್ರತಿ ಒಂದು ಸೆಕೆಂಡ್ ಹಾರ್ನ್ ಬಾರಿಸುವುದರಿಂದ ಬೆಂಗಳೂರಿನ ೮೦೦೦ ನಾಗರೀಕರ ಕಿವಿಗಳು ಗಡಚಿಕ್ಕುತ್ತವೆ .
ರಾಜ, ಮಹಾರಾಜರುಗಳು ಅವರ ವೈರಿಗಳಿಗೆ ಚಿತ್ರಹಿಂಸೆ ಕೊಡಬೇಕೆಂದರೆ ಅವರ ಕಿವಿಯೊಳಗೆ ಕಾದ ಸೀಸ ಸುರಿಯಿತ್ತಿದ್ದರಂತೆ.
ಈ ನಮ್ಮ ಪ್ರಜಾಪ್ರಭುತ್ವ ದಲ್ಲಿ ಎಲ್ಲರೂ ಒಂದೇ ಎಂದು ಭಾವಿಸಬೇಕಾದ ಸಮಯದಲ್ಲಿ ನಮ್ಮ ಚಾಲಕರು ಮಿತ್ರರು ವೈರಿಗಳು, ಮನೆಯವರು, ಪರರು ಎನ್ನುವ ಭೇಧ ಭಾವಗಲ್ಲಿಲ್ಲದೆ ಎಲ್ಲರ ಕಿವಿಯಲ್ಲೂ ಕಾದ ಸೀಸ ಸುರಿಯುತ್ತಿರುವುದು ಭಾರತದ ಪ್ರಜಾ ತಂತ್ರದ ವಿಶೇಷ ವೈಖರಿ !
ಇದನ್ನು ಕೂಡಲೇ ಬದಲಾಯಿಸಲು ಹೆಚ್ಚೇನೂ ಬೇಕಾಗಿಲ್ಲ.
೧) : ನನ್ನಿಂದ ಸಮಾಜಕ್ಕೆ ಉಪಯೋಗ ಅಲ್ಲದಿದ್ದರೂ ಕಿಂಚಿತ್ತೂ ಹಾನಿ ಆಗ ಕೂಡದು ಎಂಬ ಮನೋ ನಿರ್ಧಾರ .
೨) ಜೀವನವೆಲ್ಲ ನಾವು ಹೋರಾಡುವ ಶಾಂತಿ, ಸಮಾಧಾನದ ಸಾಧನ - ಎಲ್ಲೆಡೆಯಲ್ಲೂ ಸದಾಕಾಲವೂ ಶಬ್ದ ಮಾಲಿನ್ಯ ೪೫ ರಿಂದ ೬೫ ಡಿ ಬಿ ಒಳಗೆ ಇರಬೇಕು ಎನ್ನುವ ತೀರ್ಪನ್ನು - ಅತ್ಯುಚ್ಚ ನ್ಯಾಯಾಲಯ ನಮ್ಮಗಳ ಹಿತಕ್ಕೊಸ್ಕರವಾಗಿಯೇ ಸುಮಾರು ೧೦ ವರ್ಷಗಳ ಹಿಂದೆಯೇ ನೀಡಿದೆ. ಅದನ್ನು ಅಕ್ಷರಶಹ ಪಾಲಿಸುತ್ತೇವೆ, ಪಾಲಿಸಲು ಬೇಕಾದ ಎಲ್ಲ ವಿಧಿ ನಿಯಮಗಳನ್ನು ಪೋಲೀಸ್, ಬಿ ಎಂ ಪಿ ಇತ್ಯಾದಿ ಕಾಯ್ದೆಗಳ ಮುಖಾಂತರ ಹೊರಡಿಸಲು ಬೇಕಾದ ಎಲ್ಲ ಆಗ್ರಹಗಳನ್ನೂ ಮಾಡುತ್ತೇವೆ ಎಂಬ ಪ್ರತಿಜ್ಞೆ.
ಇದನ್ನು ಓದುವ ಓದಿದ ಎಲ್ಲ ಅಧಿಕಾರಿಗಳಲ್ಲಿ, ಪ್ರಜಾ ಪ್ರತಿನಿಧಿಗಳಲ್ಲಿ ವಿನಂತಿ: ನಿಮ್ಮ ಕೈಲಿ ಆಗುವುದೆಲ್ಲ ತತ್ಕ್ಷಣ ಮಾಡಿ ನಾಳೆಗೆ, ಇನ್ನೊಬ್ಬರಿಗೆ ಕಾಯಬೇಡಿ.
ಎಲ್ಲರ ಹಿತ ರಕ್ಷಣೆಯೊಡನೆ ನಿಮ್ಮ ಮತ್ತು ಪರಿವಾರದವರ ಆರೋಗ್ಯ ಶಾಂತಿಯೂ ಉಳಿಯುತ್ತದೆ.
ಈ ಸಂಧರ್ಭದಲ್ಲಿ ಖ್ಯಾತ ಪಾಶ್ಚಾತ್ಯ ತತ್ವ ಚಿಂತಕ ರೈನ್ ಹೋಲ್ಡ್ ನೀಬರ್ ಹೇಳಿದ ಉಕ್ತಿ - ಪ್ರಾರ್ಥನೆ ಅತ್ಯುಚಿತ. ಎಲ್ಲರಿಗೂ ಅನ್ವಯಕಾರಕ.

'ದೇವರೇ, ನನ್ನ ಕೈಲಾಗದ ಸನ್ನಿವೇಶಗಳನ್ನು ಅಂಗೀಕರಿಸುವ ತಾಳ್ಮೆ ಯನ್ನು ಕೊಡು,
ಕೈಲಾಗುವ ಸನ್ನಿವೇಶಗಳನ್ನು ಬದಲಾಯಿಸುವ ಧೈರ್ಯ ಸ್ಥೈರ್ಯ ಕೊಡು,
ಆಗುವ ಆಗದ ಸನ್ನಿವೇಶಗಳನ್ನು ತಿಳಿದುಕೊಳ್ಳುವ ಪ್ರಜ್ಞೆ ಯನ್ನು ಕೊಡು.'
God Grant me the serenity to
accept things I cannot change,
Courage to change things that I can
and the wisdom to know the difference.-- Reinhold Niebur:






M.B.ನಟರಾಜ್ ( ಕಾ: ೨೦೧೦)MS(Georgetown Univ, Wash DC)Registered Medical TechnologistAmerican Medical Technologists-USAMicrobiologist/Medical TechnologistBangalore-560086

No comments:

Post a Comment